ಹಾಸನ: ನಗರದ ತಣ್ಣೀರು ಹಳ್ಳದ ಬಳಿ ಬುಧವಾರ ಒತ್ತುವರಿ ತೆರವು ಮಾಡಲಾದ ಸ್ಥಳಕ್ಕೆ ಇಂದು ಎಂಪಿ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲೀಕರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಏಕಾಏಕಿ ಬಂದು ಅಂಗಡಿಗಳನ್ನು ತೆರವು ಮಾಡಿದ್ದಾರೆ, ಇದರಿಂದ ಸಣ್ಣಪುಟ್ಟ ವ್ಯಾಪಾರಿಗಳಿಗೆ ತುಂಬಾ ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ನೋಟಿಸ್ ನೀಡಿ ಸ್ವಲ್ಪ ಸಮಯ ನೀಡಿದ್ದರೆ ನಾವೇ ತೆರವು ಮಾಡಿಕೊಳ್ಳುತ್ತಿದ್ದೆವು ಆದರೆ ಇದೀಗ ಏಕಾಏಕಿ ಬಂದು ಅಂಗಡಿಗಳನ್ನು ಒಡೆದು ಹಾಕಿದ್ದು ಇದರಿಂದ ಅವುಗಳನ್ನೇ ನಂಬಿಕೊಂಡು ಬದುಕುತ್ತಿದ್ದ ಅನೇಕರಿಗೆ ತುಂಬಾ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಎಂಪಿ ಶ್ರೇಯಸ್ ಪಟೇಲ್ ಮಾತನಾಡಿ, ನೋಟೀಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿರುವುದು ತಪ್ಪು ನಿರ್ಧಾರ, ಯಾರು ಈ ರೀತಿ ಮಾಡಿದ್ದಾರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ತೆರವು ಕಾರ್ಯಾಚರಣೆ ಮಾಡುವಾಗ ಸ್ವಲ್ಪ ಮಾನವೀಯ ದೃಷ್ಟಿಯಿಂದ ನೋಡುವುದು ಅತಿ ಅಗತ್ಯವಾಗಿದೆ. ಬಡವರು, ಬೀದಿ ಬದಿ ವ್ಯಾಪಾರಿಗಳ ಸ್ವಲ್ಪ ವಿನಾಯಿತಿ ನೀಡಬೇಕು. ಈ ಬಗ್ಗೆ ಅತೀ ಶೀಘ್ರವಾಗಿ ಸಭೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಲ್ಲಿಯವರೆಗೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಲಾಗುವುದು ಎಂದರು.
ಇದೇ ವೇಳೆ ಬಡ ಬೀದಿ ಬದಿ ವ್ಯಾಪಾರಸ್ಥ ಮಹಿಳೆಗೆ ಸಂಸದ ಶ್ರೇಯಸ್ ಪಟೇಲ್ ಆರ್ಥಿಕ ಸಹಾಯ ಮಾಡಿ, ತಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದರು.
PublicNext
17/10/2024 02:43 pm