ಉಡುಪಿ/ ಕುಂದಾಪುರ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಸಮೃದ್ಧ ಮಳೆಯಾಗಿದೆ. ನದಿ ಪಾತ್ರದಲ್ಲಿ ನೆರೆ ಸೃಷ್ಟಿಯಾಗಿ ಜನರನ್ನು ಆತಂಕಕ್ಕೂ ತಳ್ಳಿದೆ. ಜನವಸತಿ ಪ್ರದೇಶಗಳಿಂದ ನೆರೆ ಇಳಿಮುಖವಾದರೂ, ಮೈದುಂಬಿ ವ್ಯಾಪ್ತಿಮೀರಿ ಹರಿದ ನದಿ, ಗದ್ದೆ ತೋಟ ಎಲ್ಲವನ್ನೂ ಆವರಿಸಿಕೊಂಡುಬಿಟ್ಟಿದೆ.
ಬೈಂದೂರು, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಅತಿ ಹೆಚ್ಚು ಭತ್ತದ ಬೇಸಾಯ ಮಾಡುವ ಗದ್ದೆಗಳು ನದಿಗಳಂತಾಗಿವೆ. ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ 36,000 ಹೆಕ್ಟೇರ್ ಭತ್ತ ಬೆಳೆಯಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳ ಮಳೆಗೆ 1500 ಹೆಕ್ಟೇರ್ಗಿಂತ ಹೆಚ್ಚಿನ ಗದ್ದೆಗಳು ಜಲಾವೃತವಾಗಿದೆ. ಇದರಲ್ಲಿ ಬಿತ್ತಿದ ಪೈರನ್ನು, ನಾಟಿ ಮಾಡಿದ ಕೆಲವು ಉಳುಮೆ ಮಾಡಿದ, ನಾಟಿಗೆ ಸಿದ್ಧವಾದ ಗದ್ದೆಗಳಿಗೆ ಮಳೆ, ನೆರೆ ನೀರು ಹರಿದು ನಷ್ಟವಾಗಿದೆ.
ಬಿತ್ತನೆ ಮತ್ತು ನಾಟಿ ಮಾಡಿ 15ರಿಂದ 20 ದಿವಸ ಕಳೆದು ಪೈರು ಜೀವ ಪಡೆಯುತ್ತಿದ್ದರೆ ನೆರೆ ಬಂದರೂ ರೈತನಿಗೆ ಆತಂಕ ಇರುವುದಿಲ್ಲ. ಆದರೆ ಪೈರಿನ ಮೇಲೆ ನೆರೆ ನೀರು ನಿಂತು ಸಂಪೂರ್ಣವಾಗಿ ಕೊಳೆತು ಹೋಗುತ್ತಿದೆ. ಅದರಲ್ಲೂ ನದಿ ಪಾತ್ರದಲ್ಲಿ ಸುಮಾರು ದಿನ ನೀರು ಆವರಿಸಿರುವ ಕಾರಣ ರೈತರಿಗೆ ಬಹಳ ನಷ್ಟವಾಗಿದೆ. ಉಡುಪಿ ಜಿಲ್ಲೆಯ ಆರಂಭಿಕ ಸಮೀಕ್ಷೆಯ ನಷ್ಟಗಳನ್ನು ನೋಡುವುದಾದರೆ, ಸುಮಾರು 150 ಹೆಕ್ಟೇರ್ ಭತ್ತದ ಗದ್ದೆಯ ಪೈರು ಸಂಪೂರ್ಣ ನಾಶವಾಗಿದೆ. ಸುಮಾರು 90 ಹೆಕ್ಟೇರ್ ಗದ್ದೆಯಲ್ಲಿ ಭಾಗಶಃ ಹಾನಿಯಾಗಿದೆ. ಇಡೀ ಜಿಲ್ಲೆಯ ಪೂರ್ಣ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಾಗಿದೆ. ಒಟ್ಟಾರೆ ಮಳೆಯಿಂದಾಗಿ 55 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಸದ್ಯ ಒಂದು ಎರಡು ಬೆಳೆ ಮಾಡಿ ಜೀವನ ಕಟ್ಟಿಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ.
PublicNext
24/07/2024 07:04 pm