ಉಡುಪಿ: ಆಡಳಿತಾಧಿಕಾರಿಗಳ ಅವಧಿಯಲ್ಲಿ ಹೆಚ್ಚಳ ಮಾಡಲಾದ ಕುಡಿಯುವ ನೀರಿನ ದರ ಹಾಗೂ ತೆರಿಗೆಯನ್ನು ಕೂಡಲೇ ಪರಿಶೀಲಿಸಿ ಇಳಿಕೆ ಮಾಡುವ ಬಗ್ಗೆ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಂದರ್ ಕಲ್ಮಾಡಿ, ನಗರಸಭೆ ಕುಡಿಯುವ ನೀರಿನ ಬಿಲ್ ಹೆಚ್ಚಳದಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆ ಆಗಿದೆ. ಆದುದರಿಂದ ಕೂಡಲೇ ನೀರಿನ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸುಮಿತ್ರಾ ಆರ್. ನಾಯಕ್, ತೆರಿಗೆಯನ್ನು ಕೂಡ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಯಶ್ಪಾಲ್ ಸುವರ್ಣ ಸಹಮತ ವ್ಯಕ್ತಪಡಿಸಿದರು.
ಅದೇ ರೀತಿ ಗ್ರಾಪಂಗಳಿಂದ ಬಾಕಿ ಇರುವ 1.22 ಕೋಟಿ ರೂ. ನೀರಿನ ಬಿಲ್ನ್ನು ಕೂಡ ವಸೂಲಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಉಡುಪಿ ನಗರದ ಮಸೀದಿ ಸಮೀಪದ ಅಕ್ರಮ ಕಟ್ಟಡವನ್ನು ನಗರಸಭೆಯಿಂದಲೇ ತೆರವು ಗೊಳಿಸಿದ್ದು, ಇದೀಗ ಅದೇ ಜಾಗದಲ್ಲಿ ಬೇರೆ ಹೆಸರಿನ ಹೊಟೇಲ್ ಮತ್ತೆ ನಿರ್ಮಿಸಲಾಗಿದೆ. ಇಲ್ಲಿ ಒಂದು ಡೋರ್ ನಂಬರ್ನಲ್ಲಿ 200 ಚದರ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲು ಮಾತ್ರ ಅವಕಾಶ ಇದೆ. ಆದರೆ ಇಲ್ಲಿ ಸುಮಾರು 1000 ಚದರ ವಿಸ್ತೀರ್ಣದ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸ್ಥಳೀಯ ಸದಸ್ಯ ಟಿ.ಜಿ.ಹೆಗ್ಡೆ ಆರೋಪಿಸಿದರು. ಸಭೆಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
Kshetra Samachara
07/09/2024 06:26 pm