ಮಂಗಳೂರು: ನಗರದ ಉರ್ವಸ್ಟೋರ್ ಜಂಕ್ಷನ್ನಲ್ಲಿ ಸಿಟಿ ಮತ್ತು ಸರ್ವಿಸ್ ಬಸ್ ಸಿಬಂದಿಯ ನಡುವೆ ಜಗಳ ನಡೆದಿದೆ. ಸರ್ವಿಸ್ ಬಸ್ನ ಚಾಲಕ ಮತ್ತು ನಿರ್ವಾಹಕರಿಗೆ ಸಿಟಿ ಬಸ್ ಸಿಬಂದಿ ಬೈದು ಒಂದು ಬಸ್ಸಿನ * ಒಂದು ಬದಿಯ ಕನ್ನಡಿಯನ್ನು ಒಡೆದು ಹಾಕಿರುವ ಕುರಿತಂತೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ನಿಗೋಳಿ, ಕಟೀಲು ನಡುವೆ * ಸಂಚರಿಸುವ 'ಟೀನಾ' ಹೆಸರಿನ ಸರ್ವಿಸ್ ಬಸ್ನಲ್ಲಿ ಮಸೂದ್ ಅಹಮ್ಮದ್ ಚಾಲಕನಾಗಿ ಮತ್ತು ಹಸನ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು ರವಿವಾರ ಸಂಜೆಯ ಟ್ರಿಪ್ನಲ್ಲಿ 4.20ರ ವೇಳೆಗೆ ಕೊಟ್ಟಾರ ಚೌಕಿ ಕಡೆಗೆ ಬಂದಿದ್ದಾರೆ. ಈ ವೇಳೆ ಹಿಂದಿನ ಬಂದ 'ದೀದರ್' ಹೆಸರಿನ ಸಿಟಿ ಬಸ್ - ಚಾಲಕ ಓವರ್ಟೇಕ್ ಮಾಡಿಕೊಂಡು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಬಳಿಕ 4:30ರ ವೇಳೆಗೆ ಉರ್ವಸ್ಟೋರ್ ಪ್ರಯಾಣಿಕರನ್ನು ಜಂಕ್ಷನ್ನಲ್ಲಿ ಇಳಿಸುತ್ತಿದ್ದಾಗ ಓವರ್ ಟೇಕ್ ಮಾಡಿಕೊಂಡು ಬಂದು ಅಡ್ಡಲಾಗಿ ಬಸ್ ತಂದು ನಿಲ್ಲಿದ್ದಾನೆ. ಚಾಲಕ ಚೇತನ್ ಮತ್ತು ನಿರ್ವಾಹಕ ಮಹಮ್ಮದ್ ಹುಸೈನ್ ಸಪೀಲ್ ಬಸ್ಸಿನಿಂದ ಕೆಳಗಿಳಿದು ಬಂದು ಸಾರ್ವಜನಿಕರ ಎದುರಿನಲ್ಲಿ ಹಸನ್ ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ನಿರ್ವಾಹಕ ಸಪೀಲ್ ಮರದ ಹಿಡಿಯಿರುವ ದೊಡ್ಡ ಬ್ರಶ್ನಲ್ಲಿ ಚಾಲಕ ಕುಳಿತುಕೊಳ್ಳುವ ಬಲಬದಿಯ ಸೈಡ್ ಮಿರರ್ ಮತ್ತು ಸೈಡ್ ಗ್ಲಾಸ್ ಅನ್ನು ಒಡೆದು ಜಖಂಗೊಳಿಸಿದ್ದಾನೆ. ಇದರಿಂದಾಗಿ ಸುಮಾರು 4,000 ರೂ.ನಷ್ಟ ಉಂಟಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
Kshetra Samachara
22/10/2024 02:00 pm