ಮಲ್ಪೆ: ಮನೆಬಿಟ್ಟು ಬಂದಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿರುವ ಘಟನೆ ಮಲ್ಪೆ ಬೀಚಿನಲ್ಲಿ ಸಂಭವಿಸಿದೆ. ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ. ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇವೆ, ಪೋಷಕರಿಲ್ಲದೆ ಕಲಿಯುವ ಉದ್ದೇಶಕ್ಕಾಗಿ ಹಣ ಸಂಗ್ರಹಿಸಲು ಹಾವೇರಿಯಿಂದ ಉಡುಪಿಗೆ ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ಬೀಚಿನಲ್ಲಿ ವಿಹರಿಸುತ್ತಿದ್ದ ಬಾಲಕಿಯರ ಚಲನವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಅವರಿಗೆ ಬಾಲಕಿಯರು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ನಂತರ ನಗರ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರೇಮನ್ ಗೌಡ ಪಾಟೀಲ್, ಕಾನ್ಸ್ಟೇಬಲ್ ಮಹದೇವ್ ಅವರೊಂದಿಗೆ ಬೀಚಿಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ಕಲ್ಯಾಣ ಸಮಿತಿಯ ಆದೇಶದಂತೆ ರಕ್ಷಿಸಲ್ಪಟ್ಟ ಅಪ್ರಾಪ್ತ ಮಕ್ಕಳಿಗೆ ನಿಟ್ಟೂರಿನ ಬಾಲಕಿಯರ ಬಾಲಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
PublicNext
19/10/2024 11:18 am