ಪುಣೆ : ಹಾಲಿ ಇರುವ ಮುಂಬೈ -ಬೆಂಗಳೂರು ಹೆದ್ದಾರಿ ಈಗಾಗಲೇ ದಟ್ಟಣೆಯಿಂದ ಕೂಡಿದೆ. ಹೀಗಾಗಿ ಉಭಯ ನಗರಗಳ ನಡುವೆ ಹೊಸ 14 ಪಥದ 'ಎಕ್ಸ್ಪ್ರೆಸ್ ವೇ' ನಿರ್ಮಿಸಲಾಗುವುದು. ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಮುಂಬೈನ ಅಟಲ್ ಸೇತುವೆಯಿಂದ ಈ ಹೊಸ ರಸ್ತೆ ಶುರುವಾಗಲಿದ್ದು, ಪುಣೆ ರಿಂಗ್ ರಸ್ತೆ ಮೂಲಕ ಸಾಗುತ್ತದೆ. ಜೊತೆಗೆ ಛತ್ರಪತಿ ಸಂಭಾಜಿನಗರವನ್ನು ಹಾದು ಹೋಗುತ್ತದೆ. ಇದು ಹಾಲಿ ರಸ್ತೆಗೆ ಬದಲಿಯಾಗಲಿದೆ.
ಈ ರಸ್ತೆ ನಿರ್ಮಾಣದಿಂದ ಹಾಲಿ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇನ ಶೇ.50 ರಷ್ಟು ವಾಹನಗಳು ಹೊಸ ಹೆದ್ದಾರಿಗೆ ವರ್ಗಾವಣೆಯಾಗಲಿವೆ' ಎಂದರು. 'ಇದರ ಟೆಂಡರ್ ಆಹ್ವಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ 6 ತಿಂಗಳಿನಲ್ಲಿ ಕೆಲಸ ಶುರುವಾಗಲಿದೆ' ಎಂದು ಸಚಿವರು ಹೇಳಿದರು.
ಬೆಂಗಳೂರು-ಪುಣೆ ನಡುವೆ ಹೊಸದಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಕೆಲಸ ಮಾಡುತ್ತಿದೆ. ಈ ಹೆದ್ದಾರಿ ನಿರ್ಮಾಣಕ್ಕೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಯಾವ ಮಾರ್ಗದಲ್ಲಿ ಹೆದ್ದಾರಿ ಸಾಗಬೇಕು ಎಂಬುದನ್ನು ಆನಂತರ ನಿರ್ಧರಿಸಲಾಗುವುದು. ಅದನ್ನು ಹೊರತುಪಡಿಸಿ ಬೆಂಗಳೂರು-ಮುಂಬೈ ನಡುವೆ 14 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಆದರೆ, ಹೆದ್ದಾರಿ ಸಾಗುವ ಮಾರ್ಗದಲ್ಲಿನ ಸಮಸ್ಯೆಗಳ ನಿವಾರಣಾ ಕಾರ್ಯ ನಡೆಸಲಾಗುತ್ತಿದೆಯಷ್ಟೇ ಎಂದು ಮಾಹಿತಿ ನೀಡಿದರು.
ಗಡ್ಕರಿ ಹೇಳಿದ 14 ಲೇನ್ ಎಕ್ಸ್ಪ್ರೆಸ್ ವೇ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಪ್ರಸ್ತುತ ಬೆಂಗಳೂರಿನಿಂದ ಮುಂಬೈಗೆ ಸಂಪರ್ಕಿಸಲು 2 ಮಾರ್ಗಗಳಿವೆ. ಒಂದು ಬೆಂಗಳೂರು-ಹುಬ್ಬಳ್ಳಿ- ಬೆಳಗಾವಿ-ಪುಣೆ-ಮುಂಬೈ ಮಾರ್ಗ, ಇದು 986 ಕಿ.ಮೀ. ಉದ್ದದ ಎನ್ ಎಚ್ 48. ಇನ್ನೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ-ಬಾಗಲಕೋಟೆ ಮೂಲಕ ಹಾಯ್ದು ಮಹಾರಾಷ್ಟ್ರ ಸೇರುತ್ತದೆ.
PublicNext
17/09/2024 07:35 am