ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಗೆರೆ ಗ್ರಾಮಕ್ಕೆ ಇಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಪ್ರಭು ರವರು ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ಮನೆ-ಮನೆ ಗಂಗೆ ಕಾಮಗಾರಿಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಅನುಷ್ಟಾನ ಮಾಡುವಂತೆ ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಅಭಿಯಂತರರಿಗೆ ಎಚ್ಚರಿಕೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಮಾಡುವ ಕಾಮಗಾರಿಗಳ ಅಂತರ್ಗತ ಪೈಪ್ಲೈನ್ ಗಳ, ಗೇಟ್ ವಾಲ್ವ್ ಗಳ ಮಾಹಿತಿಯನ್ನೊಳಗೊಂಡ ವಿಲೇಜ್ ಕೀ ಮ್ಯಾಪನ್ನು ಮನೆ-ಮನೆ ಗಂಗೆ ಘೋಷಣೆ ಮಾಡುವ ಮುನ್ನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
ವಿಸ್ತೃತ ಯೋಜನಾ ವರದಿಯಲ್ಲಿರುವಂತೆ, ಅಂದಾಜುಪಟ್ಟಿ ಯಲ್ಲಿ ನಿಗಧಿಪಡಿಸಿದಂತೆ ಕಾಮಗಾರಿಗಳ ಅನುಷ್ಟಾನವಾಗಿರಬೇಕು ಹಾಗೂ ಮನೆ ಮುಂದೆ ಅಳವಡಿಸುವ ಕೊಳಾಯಿಗಳಿಂದ ಹಿಡಿದು ಎಲ್ಲ ಸಾಮಗ್ರಿಗಳು ನಿಗಧಿತ ಗುಣಮಟ್ಟದ್ದಾಗಿರಬೇಕು ಎಂದರಲ್ಲದೆ ಸ್ಟ್ಯಾಂಡ್ ಪೋಸ್ಟ್ ನ್ನು ನಿಗಧಿತ ಅಳತೆಯಂತೆ ನಿರ್ಮಿಸಿ ಉತ್ತಮ ಗುಣಮಟ್ಟದ ಬಣ್ಣದಲ್ಲಿ ಯೋಜನೆ ಹೆಸರು ಬರೆದಿರಬೇಕು ಎಂದರು ಹಾಗೂ ಇತರೆ ಎಲ್ಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿದ ಅವರು ಉತ್ತಮ ಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ನಂತರ ಶುದ್ಧ ಕುಡಿಯುವ ನೀರಿನ ಘಟಕ ಪರಿಶೀಲಿಸಿ ಕುಡಿಯುವ ನೀರಿನ ಸ್ವಚ್ಚತೆ ಕಾಪಾಡುವಂತೆ ಸೂಚನೆ ನೀಡಿದರು.
ತದನಂತರ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀನಿ ಕಂಪನಿಗೆ ಭೇಟಿ ನೀಡಿ ಅಲ್ಲಿ ತಯಾರಾಗುವ ವಿವಿಧ ರೀತಿಯ ಜೀನಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು.
ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಧಾನ್ಯಗಳನ್ನು ಸ್ಥಳೀಯ ರೈತರಿಂದಲೇ ಖರೀದಿ ಮಾಡಿದರೆ ಸ್ಥಳೀಯ ರೈತರಿಗೂ ಅನುಕೂಲವಾಗುತ್ತದೆ ಎಂದು ಜೀನಿ ಮಾಲೀಕರಿಗೆ ತಿಳಿಸಿದರು.
ನಂತರ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ನರೇಗಾ ಕೂಲಿಕಾರ್ಮಿಕರ ಮಕ್ಕಳ ಪಾಲನೆ- ಪೋಷಣೆಗಾಗಿ ರತ್ನಸಂದ್ರ ಗ್ರಾಮ ಪಂಚಾಯಿತಿಯ ಯರಗುಂಟೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳ ಪಾಲನೆ- ಪೋಷಣೆ, ಆಹಾರ ವಿತರಣೆ, ಸ್ವಚ್ಚತೆ, ಕುಡಿಯುವ ನೀರು ಸೇರಿದಂತೆ ದಾಖಲಾತಿಗಳನ್ನು ಪರಿಶೀಲನೆ ನೆಡೆಸಿದರು.
ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್ .ಹರೀಶ್, ಸಹಾಯಕ ನಿರ್ದೇಶಕ (ಗ್ರಾ.ಉ.), ಕನಕಪ್ಪ ಹನುಮಪ್ಪ ಮೇಲುಸಕ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ನಾಗರಾಜು, ಹೆಚ್.ಆರ್.ಜುಂಜೇಗೌಡ, ತಾಂತ್ರಿಕ ಸಂಯೋಜಕ ಜಿ.ಪುನೀತ್ ಕುಮರ್ ಹಾಜರಿದ್ದರು.
Kshetra Samachara
22/10/2024 12:49 pm