ಕುಂದಾಪುರ : ವಿದ್ಯಾರ್ಥಿಗಳ ಜೊತೆಗೆ ಅಂತರ ಕಾಯ್ದುಕೊಂಡಷ್ಟು ಪಾಠ ಪ್ರವಚನಗಳು ಕಠಿಣವಾಗುತ್ತವೆ. ಮಕ್ಕಳಿಗೆ ಪಾಠ ಮಾಡಬೇಡಿ, ಅವರ ಜೊತೆಗೆ ಮಾತನಾಡಿ. ಅವರನ್ನು ವಿದ್ಯಾರ್ಥಿಗಳಂತೆ ಕಾಣಬೇಡಿ ನಿಮ್ಮ ಮಕ್ಕಳಂತೆ ನೋಡಿ. ನಿಮ್ಮ ಬೋಧನೆ ಸರಳ ಮಾತುಗಳಲ್ಲಿರಲ್ಲಿ. ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಶಿಕ್ಷಕರ ಕೆಲಸ ಸುಲಭವಾಗುತ್ತದೆ ಎಂದು ಮಣಿಪಾಲ ಯೂನಿವರ್ಸಿಟಿಯ ವಿಶ್ರಾಂತ ಕುಲಪತಿಗಳು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸಲರ್ ಆಗಿರುವ ಡಾ. ರಾಮನಾರಾಯಣ್ ಹೇಳಿದರು.
ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಂ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ಶಿಕ್ಷಕ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮಾತನಾಡಿ, ತರಗತಿಯ ಸಮಸ್ಯೆಗಳ ಮೂಲ ಹುಡುಕುವುದಕ್ಕಿಂತ ಪರಿಹಾರದ ಮಾರ್ಗ ಹುಡುವುದಕ್ಕೆ ಇಂತಹಾ ತರಬೇತಿಗಳು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಮಾತನಾಡಿ, ತರಬೇತಿಯಲ್ಲಿ ಪ್ರಾಮಾಣಿಕವಾಗಿ ಭಾಗವಹಿಸುವುದರ ಮೂಲಕ ಶಿಕ್ಷಕರು ಕ್ರಿಯಾಶೀಲತೆಯನ್ನು ವೃದ್ಧಿಸಿಕೊಳ್ಳಬೇಕು. ಆಗ ವಿದ್ಯಾರ್ಥಿಗಳ ಜೊತೆಗೆ ಶಾಲೆಗೆ ಉತ್ತಮ ಗೌರವ ದೊರಕಲಿದೆ ಎಂದರು.
ಶಿಕ್ಷಣ ಸಂಯೋಜಕಿ ವಿಲ್ಮಾ ಡಿ ಸಿಲ್ವಾ ಪರಿಚಯಿಸಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಂಸ್ಥೆಯ ಶಿಕ್ಷಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
21/10/2024 06:51 pm