ಹುಬ್ಬಳ್ಳಿ: ಕಿಲ್ಲರ್ ಬೈಪಾಸ್ ಕುಖ್ಯಾತಿಗೆ ಹೆಸರುವಾಸಿಯಾಗಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ನಲ್ಲಿ ಅಪಘಾತಗಳ ಸರಣಿ ಮತ್ತೆ ಮುಂದುವರೆದಿದ್ದು, ಮಧ್ಯಾಹ್ನ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಕಾರಿನಲ್ಲಿಯೇ ಸಿಲುಕಿ ನರಳಾಡಿದ ಘಟನೆ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಧಾರವಾಡಕ್ಕೆ ಔಷಧಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಇಕೋ ಕಾರು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡು ಕಾರು ಚಾಲಕ ಸಿಲುಕಿ ಒದ್ದಾಡುತ್ತಿದ್ದಾಗ ಬೇರೆ ವಾಹನದ ಸವಾರರು ಚಾಲಕನನ್ನು ಕಾರಿನಿಂದ ತೆಗೆದು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬೈಪಾಸ್ ರಸ್ತೆಯಲ್ಲಿ ದಿನನಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಚಾಲಕರು, ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಕೂಡಾ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತುಟಿ ಬಿಚ್ಚುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಚತುಷ್ಪಥ ರಸ್ತೆ ಕಾಮಗಾರಿ ಕೂಡ ಕುಂಠಿತ ಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಮುಗಿಯುವುದರೊಳಗೆ ಅದೆಷ್ಟು ಅಮಾಯಕ ಜನರ ಪ್ರಾಣ ಕಳೆದುಕೊಳ್ಳುತ್ತಾರೋ ಲೆಕ್ಕಕ್ಕೆ ಇಲ್ಲದಂತಾಗಿದೆ.
ಇನ್ನು ಜಿಲ್ಲೆಯಲ್ಲಿ ಸಾಕಷ್ಟು ಸಂಘಟನೆಗಳು ಇದ್ದು, ಇಲ್ಲದಂತಾಗಿವೆ. ಯಾರೊಬ್ಬರೂ ಕೂಡಾ ಬೈಪಾಸ್ನಲ್ಲಿ ನಡೆಯುತ್ತಿರೋ ಮರಣ ಮೃದಂಗದ ವಿರುದ್ಧ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗುತ್ತಿಲ್ಲವಾಗಿರೋದು ಸಂಘಟನೆಗಳ ನೈತಿಕತೆ ಪ್ರಶ್ನೆ ಮಾಡುವಂತಾಗಿದೆ. ಇನ್ನು ಮುಂದೆಯಾದರೂ ಹಲವು ಜೀವಗಳು ಆಹುತಿಯಾಗುವ ಮೊದಲೇ ಬೈಪಾಸ್ ನಲ್ಲಿ ಆಗುತ್ತಿರೋ ಅಪಘಾತಗಳನ್ನು ತಡೆಗಟ್ಟುವ ಕಾರ್ಯವನ್ನು ಮಾಡಬೇಕಿದೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/10/2024 08:00 pm