ದಾವಣಗೆರೆ: ಹಾಸ್ಟೆಲ್ ಗೆ ತೆರಳುತ್ತಿದ್ದ ವಾಹನ ರೈಲ್ವೆ ಅಂಡರ್ ಪಾಸ್ ನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ. ಜಲಾವೃತಗೊಂಡಿದ್ದ ರೈಲ್ವೆ ಅಂಡರ್ ಪಾಸ್ ನಲ್ಲಿ ವಾಹನ ಸಿಕ್ಕಿಹಾಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ದಸರಾ ರಜೆ ಮುಗಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ರು. ಉಚ್ಚಂಗಿಪುರದಿಂದ ಬಾಳೆಹೊನ್ನೂರಿಗೆ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಉಚ್ಚಂಗಿಪುರದ ಹತ್ತು ಜನ ವಿದ್ಯಾರ್ಥಿಗಳಿದ್ದ ವಾಹನ ಅಂಡರ್ ಪಾಸ್ ನಲ್ಲಿ ಚಲಿಸುತ್ತಿದ್ದಾಗ ವಾಹನದ ಒಳಗಡೆ ನೀರು ನುಗ್ಗಿದೆ..
ಗಾಡಿ ಎಂಜಿನ್ ಒಳಗಡೆ ನೀರು ನುಗ್ಗಿದ ಪರಿಣಾಮ ವಾಹನ ಅಲ್ಲೇ ಕೆಟ್ಟು ನಿಂತಿದೆ. ತಕ್ಷಣ ಟ್ರ್ಯಾಕ್ಟರ್ ಸಹಾಯದಿಂದ ಸ್ಥಳೀಯರು ವಾಹನ ಹೊರ ತೆಗೆದಿದ್ದಾರೆ. ವಾಹನ ದುರಸ್ತಿ ಹಿನ್ನಲೆಯಲ್ಲಿ ಬ್ರಿಡ್ಜ್ ಬಳಿ ಮಕ್ಕಳು ಕುಳಿತಿದ್ದು, ಘಟನೆಯಿಂದ ಆತಂಕಗೊಂಡಿದ್ರು. ಆತಂಕಗೊಂಡ ಮಕ್ಕಳಿಗೆ ತಿಂಡಿ ಮತ್ತು ಚಹಾ ನೀಡಿ ಸ್ಥಳೀಯರು ಧೈರ್ಯ ತುಂಬಿದ್ರು. ವಾಹನದಲ್ಲಿ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳ ಬಟ್ಟೆ, ಬ್ಯಾಗ್ ಸೇರಿದಂತೆ ಪ್ರಮುಖ ದಾಖಲಾತಿಗಳು ನೆಂದು ಹೋಗಿವೆ. ದಾವಣಗೆರೆ ಜಿಲ್ಲೆಯಾದ್ಯಂತ ಅಹೋರಾತ್ರಿ ಮಳೆ ಸುರಿದಿದ್ದು, ಹೀಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ.
PublicNext
21/10/2024 04:29 pm