ರಬಕವಿ-ಬನಹಟ್ಟಿ: ತೇರದಾಳದ ಪ್ರಮುಖ ಬೀದಿಗಳಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ನೂರಾರು ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥ ಸಂಚಲನ ಮನ ಸೆಳೆಯಿತು. ಸ್ವಯಂಸೇವಕರು ಅತ್ಯಂತ ಶಿಸ್ತು ಮತ್ತು ಶ್ರದ್ಧೆಯಿಂದ ಹೆಜ್ಜೆ ಹಾಕಿದರು.
ಇಲ್ಲಿನ ಎಪಿಎಂಸಿ ಯಿಂದ ಆರಂಭಗೊಂಡ ಪಥಸಂಚಲನ ಡಚ್ ಬಡಾವಣೆ, ದಾನಿಗೊಂಡ ಆಸ್ಪತ್ರೆ, ಮಹಾವೀರ ವೃತ್ತ, ಗುರುಕುಲ ರಸ್ತೆ, ವಿವೇಕಾನಂದ ಬಡಾವಣೆ, ದೇವರಾಜನಗರ ಸರ್ಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ಮಹಾವೀರ ಆಸ್ಪತ್ರೆ, ಬಸ್ ನಿಲ್ದಾಣ, ದತ್ತ ದೇವಸ್ಥಾನ, ಚಾವಡಿ ವೃತ್ತ, ಅಂಚೆ ಕಚೇರಿ,ಯಲ್ಲಮ್ಮನ ದೇವಸ್ಥಾನ, ಬಿರಡಿ ಗಲ್ಲಿ, ಜೋಳದ ಬಜಾರ, ಜವಳಿ ಬಜಾರ, ಸಿದ್ದೇಶ್ವರ ದೇವಸ್ಥಾನ ತಲುಪಿತು.
ನೂರಾರು ಸ್ವಯಂಸೇವಕರು ಘೋಷ್ ವಾದ್ಯದೊಂದಿಗೆ ಕವಾಯತ್ತಿನಲ್ಲಿ ಸಾಗಿ ಬಂದರು. ಸಂಚಲನದ ಉದ್ದಕ್ಕೂ ಸ್ವಯಂಸೇವಕರು ತೋರಿದ ಶಿಸ್ತು ಹಾಗೂ ಹೆಜ್ಜೆ ಹಾಕುತ್ತಿದ್ದ ಗಾಂಭೀರ್ಯ ನೋಡುಗರ ಮನ ಸೆಳೆದು ರಾಷ್ಟ್ರಭಕ್ತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ರಸ್ತೆಗಳ ಅಕ್ಕಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪ ಸಮರ್ಪಿಸಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಮೊಳಗಿಸಿದರು.
ಸಂಚಲನದ ಮಾರ್ಗಗಳು ತಳಿರು ತೋರಣ, ರಂಗೋಲಿ ಚಿತ್ತಾರಗಳಿಂದ ಅಲಂಕಾರಗೊಂಡಿದ್ದವು. ಮಕ್ಕಳು ವಿವಿಧ ಛದ್ಮವೇಷಗಳನ್ನು ಧರಿಸಿಕೊಂಡು ಗಮನ ಸೆಳೆದರು.
PublicNext
13/10/2024 07:24 pm