ವಿಜಯಪುರ: ಜಿಲ್ಲಾಧಿಕಾರಿ ಕಚೇರಿಗೆ ಅರೆ ಬೆತ್ತಲೆಯಾಗಿ ಆಗಮಿಸಿದ ರೈತರೊಬ್ಬರು ವಿಚಿತ್ರ ಹಾಗೂ ಅಚ್ಚರಿ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಹೌದು! ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ರೈತ ಮಂಜುನಾಥ ಬಿರಾದಾರ್ ಅವರು ಆಸ್ತಿ ಪತ್ರ ವರ್ಗಾವಣೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕ ಆಸ್ತಿ ಪತ್ರ ವರ್ಗಾವಣೆ ಮಾಡಲು 10 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ.
ಲಂಚ ಕೊಡಲು ಆಗದ ಈ ರೈತ ಬೇಸತ್ತು, ಜಿಲ್ಲಾಧಿಕಾರಿ ಹೆಸರಿಗೆ ಜಮೀನು ಮಾಡಲು ಮುಂದಾಗಿದ್ದಾರೆ! ಜಿಲ್ಲಾಧಿಕಾರಿಗಳೇ...ನೀವೇ ಗ್ರಾಮ ಲೆಕ್ಕಾಧಿಕಾರಿಗೆ 10 ಸಾವಿರ ರೂಪಾಯಿ ಲಂಚ ಕೊಟ್ಟು ಜಮೀನು ಖರೀದಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಲಂಚ ಕೇಳಿದ "ಮಹಾಶಯ" ಗ್ರಾಮ ಸಹಾಯಕ ಇಸ್ಮಾಯಿಲ್ ಬಡೆಗರ್ ಎನ್ನಲಾಗಿದ್ದು, ರೈತರು ಅಚ್ಚರಿ ಹಾಗೂ ವಿಶೇಷ ಪ್ರತಿಭಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಂಚ ಕೇಳಿದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
18/10/2024 07:32 am