ಹಾಸನ: ವಿಜಯ ದಶಮಿ ಅಂಗವಾಗಿ ನಗರದ ಸಾಲಗಾಮೆ ರಸ್ತೆಯಲ್ಲಿರುವ ಬನ್ನಿಮಂಟಪದಲ್ಲಿ ಶನಿವಾರ ಸಂಜೆ ನರಸಿಂಹರಾಜ ಅರಸ್ ಬನ್ನಿ ಕಡಿಯುವ ಮೂಲಕ ದಸರಾ ಆಚರಣೆ ಸಂಪನ್ನಗೊಂಡಿತು.
ಹಾಸನ ನಗರದ ವಿವಿಧ ಬಡಾವಣೆಗಳಿಂದ ಊರ ದೇವರುಗಳಾದ ಶ್ರೀ ಮೈಲಾರಲಿಂಗೇಶ್ವರ, ಶ್ರೀ ಚನ್ನಕೇಶವ, ಶ್ರೀ ವಿರೂಪಾಕ್ಷ, ಶ್ರೀ ಆಂಜನೇಯ ಹಾಗೂ ಶ್ರೀ ಸಿದ್ಧೇಶ್ವರ ದೇವರ ಅಡ್ಡೆ ಮೆರವಣಿಗೆ ಹಾಸನಾಂಬ ದೇವಾಲಯದ ವೃತ್ತದಿಂದ ವಿವಿಧ ಬೀದಿಗಳಲ್ಲಿ ಅಡ್ಡೆ ದೇವರ ಮೆರವಣಿಗೆ ಮಹಾನವಮಿ ಮಂಟಪಕ್ಕೆ ಆಗಮಿಸಿತು.
ಅಷ್ಟರಲ್ಲಿ ಮಹಾನವಮಿ ಮಂಟಪದ ಆವರಣದಲ್ಲಿ ಬಾಳೆ ಕಂದಿಗೆ ಬನ್ನಿಪತ್ರೆ ಮುಡಿಸಿ ಫೂಜೆಗೆ ಅಣಿಗೊಳಿಸಲಾಗಿತ್ತು. ಅಡ್ಡೆದೇವರುಗಳು ಮಹಾ ನವಮಿ ಮಂಟಪಕ್ಕೆ ಆಗಮಿಸಿದ ನಂತರ ಬನ್ನಿ ಮುಡಿದ ಬಾಳೆ ಕಂದಿಗೆ ಪಂಜಿನಾರತಿ ನೆರವೇರಿತು. ಆನಂತರ ಸಂಪ್ರದಾಯದ ಪ್ರಕಾರ ತಳವಾರ ಸಮುದಾಯದ ನರಸಿಂಹರಾಜ ಅರಸ್ ಅವರು ಬನ್ನಿ ಮುಡಿದ ಬಾಳೆ ಕಂದಿಗೆ ನಮಿಸಿ ಖಡ್ಗದಿಂದ ಬನ್ನಿ ಕಡಿದರು. ನಂತರ ನೆರೆದಿದ್ದ ನೂರಾರು ಜನರು ಜಯಘೋಷ ಕೂಗುತ್ತಾ ಮುಗಿ ಬಿದ್ದು ಪವಿತ್ರ ಮತ್ತು ಭಕ್ತಿಯ ಸಂಕೇತವಾದ ಬನ್ನಿಯ ಪತ್ರೆಯನ್ನು ತೆಗೆದುಕೊಂಡು ಭಕ್ತಿಭಾವ ಮೆರೆದರು.
Kshetra Samachara
12/10/2024 09:22 pm