ರಾಯ್ಪುರ : ಅಯೋಧ್ಯೆ ರಾಮಮಂದಿರ ಭೇಟಿ ವಿಚಾರದಲ್ಲಿ ಸ್ವಪಕ್ಷದವರಿಂದಲೇ ಟೀಕೆ ಎದುರಿಸಿದ್ದಕ್ಕೆ ಅಸಮಾಧಾನಗೊಂಡು ಎಐಸಿಸಿ ವಕ್ತಾರೆ ರಾಧಿಕಾ ಖೇರಾ ಪಕ್ಷದ ಎಲ್ಲ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಛತ್ತೀಸಗಢಕ್ಕೆ ಕಾಂಗ್ರೆಸ್ ಸಂವಹನ ಮತ್ತು ಮಾಧ್ಯಮ ಸಂಯೋಜಕರಾಗಿದ್ದ ರಾಧಿಕಾ, ಈಚೆಗೆ ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಅದಕ್ಕಾಗಿ ಟೀಕೆ ಎದುರಿಸಬೇಕಾಗಿ ಬಂದಿತ್ತು. ಅದೇ ರೀತಿ, ಛತ್ತೀಸಗಢ ಕಾಂಗ್ರೆಸ್ನ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಮತ್ತು ರಾಧಿಕಾ ನಡುವೆ ರಾಯ್ಪುರದ ಕಾಂಗ್ರೆಸ್ ಕಚೇರಿಯಲ್ಲಿ ಈಚೆಗೆ ಮಾತಿನ ಚಕಮಕಿ ನಡೆದಿತ್ತು. ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
‘ಭಗವಾನ್ ಶ್ರೀರಾಮನ ಜನ್ಮಸ್ಥಳವು ಪ್ರತಿಯೊಬ್ಬ ಹಿಂದೂವಿಗೂ ಪವಿತ್ರ ಕ್ಷೇತ್ರವಾಗಿದೆ. ಬಾಲರಾಮನ ದರ್ಶನದಿಂದ ತನ್ನ ಜೀವನ ಸಾರ್ಥಕವಾಯಿತು ಎಂದು ಪ್ರತಿಯೊಬ್ಬ ಹಿಂದೂ ಭಾವಿಸಿದರೆ, ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. ಎನ್ಎಸ್ಯುಐನಿಂದ ಎಐಸಿಸಿ ಮಾಧ್ಯಮ ವಿಭಾಗದವರೆಗೆ 22 ವರ್ಷಗಳಿಗೂ ಅಧಿಕ ಕಾಲ ಪ್ರಾಮಾಣಿಕವಾಗಿ ನಾನು ಯಾವ ಪಕ್ಷಕ್ಕೆ ದುಡಿದಿದ್ದೇನೋ, ಅದೇ ಪಕ್ಷವು ನನ್ನ ಅಯೋಧ್ಯೆ ಭೇಟಿಯನ್ನು ವಿರೋಧಿಸಿದ್ದು ನೋವುಂಟುಮಾಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಛತ್ತೀಸಗಢ ಕಾಂಗ್ರೆಸ್ ಕಚೇರಿಯಲ್ಲಿ ನನ್ನನ್ನು ಅವಮಾನಿಸಲಾಗಿದೆ. ಅಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ದೂರು ನೀಡಿದರೂ ನನಗೆ ನ್ಯಾಯ ದೊರೆತಿಲ್ಲ’ ಎಂದು ದೂರಿದ್ದಾರೆ.
PublicNext
05/05/2024 08:55 pm