ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಏಷ್ಯಾದ ಅತಿ ಎರಡನೇ ದೊಡ್ಡ ಕೆರೆ ಸೂಳೆಕೆರೆ (ಶಾಂತಿಸಾಗರ) ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಇಡೀ ಗುಡ್ಡ ಹೊತ್ತಿ ಉರಿದಿದೆ.
ಶಾಂತಿಸಾಗರ ಕೆರೆಯ ಪಕ್ಕದಲ್ಲೇ ಇರುವ ಗುಡ್ಡದ ಸುತ್ತ ದಟ್ಟವಾಗಿ ಒಣಹುಲ್ಲು ಬೆಳೆದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಸಂಭವಿಸಬಹುದಾದ ಬಹುದೊಡ್ಡ ಅನಾಹುತವನ್ನು ಮಾವಿನಕಟ್ಟೆ ಅರಣ್ಯ ಪ್ರದೇಶದ ಸಿಬ್ಬಂದಿ ತಪ್ಪಿಸಿದ್ದಾರೆ.
ಮಾವಿನ ಕಟ್ಟೆ ಅರಣ್ಯ ಪ್ರದೇಶದ ಆರ್ ಎಫ್ ಒ ಉಷಾ ಅವರ ನೇತೃತ್ವದಲ್ಲಿ ಒಟ್ಟು 15-20 ಸಿಬ್ಬಂದಿ ಒಂದೇ ರಾತ್ರಿಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಕಳೆದ ರಾತ್ರಿ ಸೂಳೆಕೆರೆ (ಶಾಂತಿಸಾಗರ) ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರು. ರಾತ್ರಿಯಿಂದ 20 ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಬೆಂಕಿ ನಂದಿಸಿದ್ದೇವೆ.
ರಾತ್ರಿಯಿಂದ ಕಾರ್ಯಾಚರಣೆ ಆರಂಭಿಸಿ, ಇಂದು ಬೆಳಿಗ್ಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಆರ್ ಎಫ್ ಒ ಉಷಾ ತಿಳಿಸಿದರು.
PublicNext
17/01/2025 01:37 pm