ಮಂಡ್ಯ: ರಾಜ್ಯ ಸರ್ಕಾರ ಕೃಷಿ ಸಮ್ಮಾನ್ ಯೋಜನೆಗೆ ಕತ್ತರಿ ಹಾಕಿದ್ದು, ಹಾಲು ಉತ್ಪಾದಕರಿಗೆ ಹಾಲಿನ ಬೆಲೆ ಕಡಿಮೆ ಮಾಡಿ, ವಿದ್ಯುತ್ನಲ್ಲಿ ಅಕ್ರಮ ಸಕ್ರಮ ಯೋಜನೆ ಬಂದ್ ಮಾಡಿ, ಬಡ ರೈತ ಮಕ್ಕಳ ರೈತ ವಿದ್ಯಾರ್ಥಿನಿಧಿಯನ್ನು ಬಂದ್ ಮಾಡಿದ್ದರೂ ಕೃಷಿ ಸಚಿವ ಚೆಲುವರಾಯಸ್ವಾಮಿ ತುಟಿ ಪಿಟಕ್ ಅನ್ನದ ಕಾರಣ ಅವರು ಕೃಷಿ ಸಚಿವರಾಗಿ ವಿಫಲರಾಗಿದ್ದಾರೆ. ಈ ಕಾರಣ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಡೀಸೆಲ್ ಸಹಾಯಧನ ಬಂದ್ ಮಾಡಿ ಆರ್ಟಿಸಿ ಎಮ್ಆರ್ ಇ- ಸ್ಟ್ಯಾಂಪ್ ನೋಂದಣಿ ಶುಲ್ಕಗಳ ಹೆಚ್ಚಳ ಮಾಡಿದೆ. ಸಾವಯವ ಕೃಷಿ ಯೋಜನೆಗೆ ಕತ್ತರಿ ಹಾಕಿದ್ದು ಕೃಷಿ ಬೆಲೆ ಆಯೋಗಕ್ಕೆ ಚಾಲನೆ ನೀಡಿಲ್ಲ. ಗಂಗಾ ಕಲ್ಯಾಣ ಯೋಜನೆ ಹಳ್ಳ ಹಿಡಿದಿದೆ. ವಕ್ಫ್ ಮಂಡಳಿಯಿಂದ ರೈತರ ಭೂಮಿಯ ಮೇಲೆ ಅತಿಕ್ರಮಣವಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ರಾಜ್ಯ ಸರ್ಕಾರ, ಕಳೆದ ವರ್ಷ ಬರಗಾಲದಿಂದ ಕಂಗಾಲಾಗಿದ್ದ ರೈತರಿಗೆ ಬಿತ್ತನೆ ಬೀಜಗಳ ಬೆಲೆ ಹೆಚ್ಚಳದ ಬರೆ ಎಳೆದಿದೆ. ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ತೆರೆಯದೆ ಭತ್ತ ಬೆಳೆದ ರೈತನಿಗೆ ಎಕರೆಗೆ ಸರಾಸರಿ 15,000 ನಷ್ಟ ಸಂಭವಿಸಿದೆ. ಈ ಎಲ್ಲ ವೈಫಲ್ಯಗಳ ಆಧಾರದ ಮೇಲೆ ಕೃಷಿ ಸಚಿವರ ರಾಜೀನಾಮೆಗೆ ಕಿಸಾನ್ ಸಂಘ ಆಗ್ರಹಿಸುತ್ತದೆ ಎಂದು ರಮೇಶ್ ರಾಜು ತಿಳಿಸಿದ್ದಾರೆ.
Kshetra Samachara
11/01/2025 12:28 pm