ಮಲ್ಪೆ: ಇದು ಹಬ್ಬಗಳ ಪರ್ವ. ಗಣೇಶ ಚತುರ್ಥಿ, ಕ್ರೈಸ್ತರ ಮೊಂತಿ ಫೆಸ್ತ್, ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬಗಳು ಸಾಲು ಸಾಲಾಗಿ ಬಂದಿವೆ. ಗಣೇಶ ಚತುರ್ಥಿ ಹಾಗೂ ಮೊಂತಿಫೆಸ್ತ್ ಹಬ್ಬಕ್ಕೆ ತರಕಾರಿ ಖಾದ್ಯಗಳಿಗೆ ಬೇಡಿಕೆ ಹೆಚ್ಚು. ಈ ನಿಟ್ಟಿನಲ್ಲಿ ಸ್ಥಳೀಯ ಕೃಷಿಕರಿಗೆ ಹೆಚ್ಚಿನ ಸಹಾಯವಾಗಲೆಂಬ ನಿಟ್ಟಿನಲ್ಲಿ ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಮೊಂತಿ ಫೆಸ್ತ್ ಸಂದರ್ಭದಲ್ಲಿ ಕೃಷಿಕರು ತಮ್ಮ ತೋಟದಲ್ಲಿ ತಾವೇ ಬೆಳೆದ ತರಕಾರಿಗಳನ್ನು ನೇರವಾಗಿ ತರಕಾರಿ ಸಂತೆ ಎಂಬ ಹೆಸರಿನಲ್ಲಿ ಎರಡು ದಿನಗಳ ಮಾರಾಟ ಮೇಳವನ್ನು ಆಯೋಜಿಸಿದೆ.
ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ಹಲವಾರು ರೈತರು ತಮ್ಮ ತೋಟದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಿ ಬೆಳೆಸಿದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂಡೆ, ಬಸಳೆ ಹಾಗೂ ಇತರ ತರಕಾರಿಗಳನ್ನು ಕೊಯ್ದು ತಂದು ಮಾರಾಟಕ್ಕೆ ಇಡಲಾಗಿದೆ. ತೊಟ್ಟಂ ಚರ್ಚ್ ವ್ಯಾಪ್ತಿಯಲ್ಲದೆ ಪಕ್ಕದ ಚರ್ಚುಗಳ ಸದಸ್ಯರೂ ಕೂಡ ಶುದ್ಧ ಸಾವಯವ ತರಕಾರಿಗಳನ್ನು ಖರೀದಿಸಿದರು. ಇಲ್ಲಿ ಯಾವುದೇ ಮಧ್ಯವರ್ತಿಗಳು, ದಲ್ಲಾಳಿಗಳ ಕಿರಿ ಕಿರಿ ಇಲ್ಲದೆ ನೇರವಾಗಿ ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
Kshetra Samachara
06/09/2024 03:42 pm