ನವದೆಹಲಿ : ಸಂಸತ್ ಅಧಿವೇಶನದಲ್ಲಿ ಇಂದು ರಾಜ್ಯದ ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಚರ್ಚೆಗೆ ಕಾಂಗ್ರೆಸ್ ಅಡ್ಡಿಪಡಿಸಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಸಂಸತ್ ಅವರಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಮುಡಾ ಮತ್ತು ವಾಲ್ಮೀಕಿ ಹಗರಣಗಳು ಕಾಂಗ್ರೆಸ್ಸಿನ ಭ್ರಷ್ಟ ವ್ಯವಸ್ಥೆ ಮತ್ತು ಕಾರ್ಯವೈಖರಿಯನ್ನು ಬಹಿರಂಗಪಡಿಸುತ್ತವೆ ಎಂದು ಹೇಳಿದರು.
ಈ ಎರಡೂ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ತರಲು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಮತ್ತು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಯತ್ನಿಸಿದರು. ಆದರೆ, ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿ ಅವರನ್ನು ಮೌನವಾಗಿಸಿದರು ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದರು.
"ರಾಮ" ನೆಂದರೆ ಕಾಂಗ್ರೆಸ್ ಗೆ ಹಗೆ: ರಾಮನೆಂದರೆ ಕಾಂಗ್ರೆಸ್ ಹಗೆ ಸಾಧಿಸುತ್ತದೆ. ಹಾಗಾಗಿಯೇ ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆ ಹೆಸರು ಬದಲಾಯಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಚಿವ ಸಂಪುಟದ ಈ ತೀರ್ಮಾನ ಕಾಂಗ್ರೆಸ್ ಗೆ ಇರುವ ಹಗೆಯನ್ನು ತೋರಿಸುತ್ತದೆ. ಇವರ ಈ ನಿರ್ಧಾರ ಅವರ ರಿಯಲ್ ಎಸ್ಟೇಟ್ ಹಿತಾಸಕ್ತಿಗಳನ್ನು ಕಾಪಾಡುವ ರಾಜಕೀಯ ತಂತ್ರವಷ್ಟೇ ಎಂದು ಪ್ರಲ್ಹಾದ ಟೀಕಿಸಿದ್ದಾರೆ.
PublicNext
26/07/2024 09:13 pm