ಬೆಂಗಳೂರು : ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಯೂಟ್ಯೂಬರ್ ಅವಹೇಳಕಾರಿ ವಿಡಿಯೋ ಹಾಕಿದ್ದ. ಈ ಬಗ್ಗೆ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿತ್ತು. ದೂರಿನ ಅನ್ವಯ ಆ ಯೂಟ್ಯೂಬರ್ಗೆ ನೋಟಿಸ್ ಕೊಡಲು ನೋಯ್ಡಾಗೆ ಹೋದ ನಮ್ಮ ಪೊಲೀಸರೇ ಪೇಚಿಗೆ ಸಿಲುಕಿದ ಬಗ್ಗೆ ವರದಿಯಾಗಿದೆ.
ಹೌದು ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡಿದ್ದಾರೆಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ಯೂಟ್ಯೂಬರ್ ಅಜಿತ್ ಭಾರತಿ ವಿವಾದಾತ್ಮಕ ವಿಡಿಯೋ ಹರಿಬಿಟ್ಟಿದ್ದರು. ಅಜಿತ್ ಭಾರತಿ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಬೆನ್ನತ್ತಿದ ಕರ್ನಾಟಕ ಪೊಲೀಸರು ಸ್ಥಳೀಯ ಠಾಣೆಗೆ ಮಾಹಿತಿ ನೀಡದೆ ಏಕಾಏಕಿ ಅಜಿತ್ ಭಾರತಿ ಮನೆಗೆ ತೆರಳಿ ನೋಟಿಸ್ ನೀಡಿದ್ದಾರೆ. ಮೊದಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ರಾಜ್ಯ ಪೊಲೀಸರು ಎಡವಟ್ಟು ಮಾಡಿಕೊಂಡರು. ಅಲ್ಲದೇ ಪೊಲೀಸರು ಸಮವಸ್ತ್ರದ ಬದಲಾಗಿ ಸಾಮಾನ್ಯ ಉಡುಪುಗಳಲ್ಲಿ ತೆರಳಿದ್ದು ಕೂಡ ಹಲವು ಗೊಂದಲಕ್ಕೆ ಕಾರಣವಾಗಿದೆ.
ಇದೇ ಕಾರಣಕ್ಕೆ ಸ್ಥಳೀಯರ ಜತೆ ವಾಗ್ವಾದ ಉಂಟಾಗಿದ್ದು ಯುಪಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಘಟನೆ ಬಗ್ಗೆ ಯೂಟ್ಯೂಬರ್ ಅಜಿತ್ ಭಾರತಿ ಟ್ವೀಟ್ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿದ್ದು, 2 ಗಂಟೆ ಸುಮಾರಿಗೆ ಕರ್ನಾಟಕ ಪೊಲೀಸ್ ಎಂದು ಕರೆಸಿಕೊಳ್ಳುವ ಮೂವರು ಯುವಕರು ನನ್ನ ಮನೆಯ ಕೆಳಗೆ ಬಂದಿದ್ದರು. ನೋಟಿಸ್ ನೀಡಲು ಬಂದಿದ್ದೇವೆ ಎಂದು ತಿಳಿಸಿದರು. ನಾನು ನೋಯ್ಡಾ ಪೊಲೀಸರಿಗೆ ವರದಿ ಮಾಡಲಾಗಿದೆಯೇ? ಸ್ಥಳೀಯ ಪೊಲೀಸ್ ಠಾಣೆ ಯಾವುದು? ಎಂದು ಪ್ರಶ್ನಿಸಿದೆ. ಆ ಬಳಿಕ ನಾನು ತಕ್ಷಣ ಸ್ಥಳೀಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದೇನೆ. ಶೀಘ್ರದಲ್ಲೇ ಉತ್ತರ ಪ್ರದೇಶ ಪೊಲೀಸರು ಬಂದರು.
ಈ ಬಗ್ಗೆ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಸ್ಥಳೀಯ ಪೊಲೀಸರಿಗೆ ಅನೇಕ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಈ ನಡೆ ಬಗ್ಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
PublicNext
22/06/2024 05:55 pm