ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ 12 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ. ಆರೋಪಿಗಳಾದ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.
ಪ್ರಕರಣದ ಬಂಧಿತ ಆರೋಪಿಗಳನ್ನ ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಪೊಲೀಸರು ಆ ಪೈಕಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ನನ್ನ ಇನ್ನೂ ಎರಡು ದಿನ ಕಸ್ಟಡಿಗೆ ಪಡೆದಿದ್ದರು.ದರ್ಶನ್ ಮನೆಯಲ್ಲಿ ಸಿಕ್ಕ ಹಣದ ಮೂಲದ ಕುರಿತು ತನಿಖೆ, ಸಾಕ್ಷ್ಯ ನಾಶಕ್ಕಾಗಿ ವಿನಯ್ ಹಾಗೂ ಪ್ರದೋಶ್ ಮಾಡಿದ್ದ ಯತ್ನಗಳು, ಹಾಗೂ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಧನರಾಜ್ ಒದಗಿಸಿದ್ದ ಮೆಗ್ಗರ್ ಡಿವೈಸ್ ಕುರಿತು ತನಿಖೆಯ ಅಗತ್ಯವಿರುವುದರಿಂದ ನಾಲ್ವರನ್ನೂ ಕಸ್ಟಡಿಗೆ ಪಡೆಯಲಾಗಿತ್ತು. ಇಂದು ಕಸ್ಟಡಿ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಆರೋಪಿತರನ್ನ ಈಗಾಗಲೇ ಮೂರು ಬಾರಿ ಕಸ್ಟಡಿಗೆ ಪಡೆದಿರುವುದರಿಂದ ಮತ್ತೊಮ್ಮೆ ಕಸ್ಟಡಿಗೆ ಪಡೆಯುವ ಅವಕಾಶಗಳು ಕಡಿಮೆ ಎನ್ನಲಾಗಿದೆ. ಆದ್ದರಿಂದ ದರ್ಶನ್ ಸೇರಿದಂತೆ ನಾಲ್ವರೂ ಇಂದು ಜೈಲು ಪಾಲಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಈಗಾಗಲೇ ಆರೋಪಿಗಳನ್ನ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದ್ದು, ಮಧ್ಯಾಹ್ನ 3 ಗಂಟೆಯ ನಂತರ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.
PublicNext
22/06/2024 01:41 pm