ವಿಜಯನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಅಂತ ವಿವಿಧ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್ಗೆ ಬಹುತೇಕ ಬೆಂಬಲ ವ್ಯಕ್ತವಾಗಿದೆ.
ಹೊಸಪೇಟೆ ತಾಲೂಕಿನ ವಾಲ್ಮೀಕಿ ಸರ್ಕಲ್ನಿಂದ ಆರಂಭಗೊಂಡ ಮೆರವಣಿಗೆ ಉದ್ದಕ್ಕೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ ಮದಕರಿ ಸರ್ಕಲ್, ಅಪ್ಪು ಸರ್ಕಲ್, ಕೋರ್ಟ್ ಸರ್ಕಲ್ ಬಳಿಕ ಅಂಬೇಡ್ಕರ್ ಸರ್ಕಲ್ಗೆ ತೆರಳಿತು. ಬಳಿಕ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದ ಸಾವಿರಾರು ಸಂಘಟನಾಕಾರರು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಆಕ್ರೋಶ ಹೊರಹಾಕಿದರು.
ವಿಜಯನಗರ ಜಿಲ್ಲೆ ಬಂದ್ಗೆ ಕರೆ ಕೊಟ್ಟಿದ್ದ ನಾನಾ ಸಂಘಟನೆಗಳ ಬೆಂಬಲಕ್ಕೆ ಕೂಡ್ಲಿಗಿ ತಾಲೂಕಿನಲ್ಲೂ ಬೆಂಬಲ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಅಂಗಡಿ, ಮುಂಗಟ್ಟು ಮುಚ್ಚಲಾಗಿತ್ತು. ಆದ್ರೆ ಸರ್ಕಾರಿ ಸೇವೆಗಳಾದ ಸಾರಿಗೆ ಸೇವೆ, ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ವಿಜಯನಗರ ಜಿಲ್ಲೆಯ ಬಂದ್ ಕರೆ ವೇಳೆ ವಿಶೇಷ ಚೇತನರು ಗಮನ ಸೆಳೆದರು. ಮೂರು ಚಕ್ರದ ವಾಹನಗಳ ಮೇಲೆ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದರು.
ವಿಜಯನಗರ ಜಿಲ್ಲಾ ಬಂದ್ ಕರೆಗೆ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಒಬ್ಬ ಎಸ್ಪಿ, 4 ಜನ ಡಿವೈಎಸ್ಪಿ, 16 ಜನ ಇನ್ಸ್ಪೆಕ್ಟರ್, 40 ಜನ ಸಬ್ ಇನ್ಸಪೇಕ್ಟರ್, ಎಎಸ್ಐ, ಎಚ್ ಸಿ, ಪಿಸಿಗಳು 768 ಜನ, 55 ಜನ ಹೋಂಗಾರ್ಡ್ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ 6 ಡಿಎಆರ್ ತುಕಡಿಗಳು, 4 ಕೆಎಸ್ ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿತ್ತು.
PublicNext
09/01/2025 07:30 pm