ವಿಜಯನಗರ: ಸರ್ಕಾರಿ ವರ್ಕಿಂಗ್ ಡೇನಲ್ಲೇ ಬಳ್ಳಾರಿ- ವಿಜಯನಗರ ಜಿಲ್ಲೆಗಳ ಆಯುಷ್ಯ ಇಲಾಖೆ ಅಧಿಕಾರಿಗಳು ತಿಂಗಳ ಸಭೆ ಹೆಸರಲ್ಲಿ ಕಳ್ಳಾಟ ನಡೆಸೋದ್ರ ಜೊತೆಗೆ ಭರ್ಜರಿ ಮೋಜು - ಮಸ್ತಿ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ಅಂಕ ಸಮುದ್ರ ಪಕ್ಷಿಧಾಮದಲ್ಲಿ ನಡೆದಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಆಯುಷ್ಯ ಅಧಿಕಾರಿಗಳು ಸರ್ಕಾರಿ ದುಡ್ಡಲ್ಲಿ ಮೋಜು - ಮಸ್ತಿ ಮಾಡಿದ್ದಾರೆ. ಜೊತೆಗೆ ಇಲಾಖೆಯ ಕುಂದು ಕೊರತೆಗಳನ್ನ ಕಛೇರಿಯಲ್ಲೇ ನಡೆಸಬೇಕು ಅನ್ನೋದು ಸರ್ಕಾರದ ಕಠಿಣ ರೂಲ್ಸ್ ಇದೆ. ಆದ್ರೆ ಬಳ್ಳಾರಿ - ವಿಜಯನಗರ ಜಿಲ್ಲೆಯ ಆಯುಷ್ಯ ಅಧಿಕಾರಿ ಡಾ. ಸರಳಾ ಆದೇಶ ಧಿಕ್ಕರಿಸಿ ಅಂಕಸಮುದ್ರ ಪಕ್ಷಿಧಾಮಕ್ಕೆ ಶಿಫ್ಟ್ ಮಾಡಿದ್ರು. ಜೊತೆಗೆ ಇಲಾಖೆ ತಿಂಗಳ ಸಭೆ ಹೆಸರಲ್ಲಿ ಎರಡೂ ಜಿಲ್ಲೆಯ ಹತ್ತಾರು ಸರ್ಕಾರಿ ವಾಹನಗಳು, 82ಕ್ಕೂ ಅಧಿಕ ಸಿಬ್ಬಂದಿಯನ್ನ ಒಟ್ಟಿಗೆ ಸೇರಿಸಿ ಪಾರ್ಟಿ ಮಾಡಿ ಸರ್ಕಾರದ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳ ಸೇವೆ ಮಾಡಲು ಎರಡೂ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಮತ್ತು ಕಚೇರಿಗಳಲ್ಲಿ ಡಿ ದರ್ಜೆ ನೌಕರರನ್ನ ಅಧಿಕಾರಿಗಳು ಊಟ ಮಾಡಿಟ್ಟ ತಟ್ಟೆ, ನೀರು ಕುಡಿದಿಟ್ಟ ಲೋಟಗಳನ್ನ ಎತ್ತೋದಕ್ಕೆ ಬಳಸಿಕೊಂಡು ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ.
ಅಷ್ಟೇ ಅಲ್ಲದೇ ಅಂಕ ಸಮುದ್ರ ಪಕ್ಷಿಧಾಮದಲ್ಲಿ ಆಯುಷ್ಯ ಅಧಿಕಾರಿ ಡಾ. ಸರಳಾ ಅವಳಿ ಜಿಲ್ಲೆಯ ಅಧಿಕಾರಿಗಳನ್ನ ಒಗ್ಗೂಡಿಸಿ ಇದೇ ವೇಳೆ ಹೊಸ ವರ್ಷದ ಕೇಕ್ ಕತ್ತರಿಸಿ ಎಂಜಾಯ್ ಮಾಡಿದ್ದಾರೆ. ಅತ್ತ ವೈದ್ಯರು ಮೋಜು - ಮಸ್ತಿ ಮಾಡ್ತಿದ್ರೆ ಇತ್ತ ವೈದ್ಯರು, ಸಿಬ್ಬಂದಿ ಇಲ್ಲದೇ ಇಲಾಖೆ, ಕಚೇರಿಗಳು ಬಿಕೋ ಅಂತಿದ್ವು. ಜೊತೆಗೆ ಆಸ್ಪತ್ರೆಗೆ ಟ್ರೀಟ್ ಮೆಂಟ್ ಗೆ ಅಂತ ಬಂದ ರೋಗಿಗಳು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ವಾಪಸ್ ಹೋದ್ರು.
ಸರ್ಕಾರದ ನಿಯಮದ ಚೌಕಟ್ಟಿನಡಿ ಕಾರ್ಯ ನಿರ್ವಹಿಸಬೇಕಿದ್ದ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಮಜಾ ಮಾಡಿದ್ರಿಂದ ಹೇಳೋರು ಕೇಳೋರು ಯಾರು ಇಲ್ವಾ ಅಂತ ಜನ ಪ್ರಶ್ನಿಸ್ತಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ರೂಲ್ಸ್ ಗಾಳಿಗೆ ತೂರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಲೇಬೇಕು ಅನ್ನೋದು ಪ್ರಜ್ಞಾವಂತರು ಮಾತಾಗಿದೆ.
PublicNext
07/01/2025 08:05 pm