ಚನ್ನಪಟ್ಟಣ : ತಾಲ್ಲೂಕಿನ ಪೌಳಿದೊಡ್ಡಿ ಗ್ರಾಮದ ಬೀದಿದೀಪದ ತುಂಡಾದ ವಿದ್ಯುತ್ ತಂತಿ ಮುಟ್ಟಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ಮಹಿಳೆ ಗಾಯಗೊಂಡಿದ್ದಾರೆ.
ಗಂಗಮ್ಮ (45) ಮೃತ ಮಹಿಳೆ. ಗಾಯಗೊಂಡಿರುವ ಸಾವಿತ್ರಮ್ಮ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಗ್ರಾಮದಲ್ಲಿರುವ ಬೀದಿ ದೀಪದ ವಿದ್ಯುತ್ ತಂತಿ ತುಂಡಾಗಿ ಪಕ್ಕದಲ್ಲಿರುವ ತಂತಿ ಬೇಲಿ ಮೇಲೆ ಬಿದ್ದಿತ್ತು. ಎಮ್ಮೆ ಮತ್ತು ಕುರಿಗಳಿಗೆ ನೀರು ಕುಡಿಸಿಕೊಂಡು ಇದೇ ಮಾರ್ಗದಲ್ಲಿ ಬರುತ್ತಿದ್ದ ಗಂಗಮ್ಮ ಅವರು, ಬೇಲಿ ಮುಟ್ಟಿದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಗಂಗಮ್ಮ ಅವರಿಗೆ ವಿದ್ಯುತ್ ಪ್ರವಹಿಸುತ್ತಿರುವುದನ್ನು ಕಂಡು ರಕ್ಷಿಸಲು ಮುಂದಾದ ಪಕ್ಕದಲ್ಲಿದ್ದ ಸಾವಿತ್ರಮ್ಮ ಅವರಿಗೂ ಗಾಯವಾಗಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸಾವಿಗೆ ಬೆಸ್ಕಾಂ ಸಿಬ್ಬಂದಿ ಹಾಗೂ ಬೀದಿ ದೀಪವನ್ನು ಸರಿಯಾಗಿ ನಿರ್ವಹಣೆ ಮಾಡದ ಸ್ಥಳೀಯ ಗ್ರಾಮ ಪಂಚಾಯಿತಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
05/01/2025 03:54 pm