ಕೇರಳ, ಮಹಾರಾಷ್ಟ್ರದಿಂದ ಆಗಮಿಸುವವರ ವಿವರ ಕೊಡಿ: ಬಂಟ್ವಾಳ ಪುರಸಭೆ ಸೂಚನೆ
ಬಂಟ್ವಾಳ: ಕೋವಿಡ್ ವೈರಸ್ ಮತ್ತೆ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಬಂಟ್ವಾಳ ಪುರಸಭೆ ವ್ಯಾಪ್ತಿಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದವರಿಗೆ ವಿಶೇಷ ಸರ್ವೇಕ್ಷಣೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.
ಕೇರಳ, ಮಹಾರಾಷ್ಟ್ರದಿಂದ ಬರುವವರ ಕುರಿತು ಸಂಸ್ಥೆ, ಉದ್ದಿಮೆಗಳ ಮಾಲೀಕರು ಪ್ರತಿದಿನ ನಿರ್ದೇಶನ ಪಾಲಿಸಬೇಕು. ಇಲ್ಲವಾದರೆ ಅವರೇ ಹೊಣೆಗಾರರಾಗುತ್ತಾರೆ. ಉದ್ದಿಮೆ ಸ್ಥಳ, ಸಂಸ್ಥೆಗಳಿಗೆ ಈ ರಾಜ್ಯಗಳಿಂದ ಆಗಮಿಸುವವರ ಹೆಸರು, ಮಾಹಿತಿ ದಾಖಲಿಸಬೇಕು. ಆಗಮಿಸಿದವರು 72 ಗಂಟೆಗಳೊಳಗೆ ನಡೆಸಿದ ಆರ್ ಟಿ, ಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ. ಸಂಸ್ಥೆ, ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅನ್ಯರಾಜ್ಯಗಳ ಕಾರ್ಮಿಕರು, ಸಿಬ್ಬಂದಿ ಅವರ ಊರಿಗೆ ತೆರಳಿ ಹಿಂದಿರುಗುವಾಗ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರಬೇಕು, ವರದಿ ಏಳು ದಿನಗಳ ಸಿಂಧುತ್ವ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಸಂಸ್ಥೆ, ಉದ್ದಿಮೆ, ಹೋಟೆಲ್, ಲಾಡ್ಜ್ ಗಳಲ್ಲಿ ನೆಗೆಟಿವ್ ವರದಿ ಇದ್ದರೆ ಮಾತ್ರ ತಂಗಲು ಅವಕಾಶ ನೀಡಬೇಕು. ಮನೋರಂಜನೆ, ಸಾಂಸ್ಕೃತಿಕ, ಧಾರ್ಮಿಕ, ಇತರ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ದೈಹಿಕ ಅಂತರ, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಶೌಚಾಲಯ ಶುಚಿತ್ರ ಕಡ್ಡಾಯ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.