ಬಂಟ್ವಾಳ: ಎಸೆಸ್ಸೆಲ್ಸಿ ಉತ್ತರಪತ್ರಿಕೆ ಮೌಲ್ಯಮಾಪನದಿಂದ ಆಗಿರುವ ಅನಾಹುತಗಳ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳುವ ಜತೆಗೆ ಮೌಲ್ಯಮಾಪಕರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬಿ.ಸಿ.ರೋಡು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಕೊರೊನಾ ಆತಂಕದ ಮಧ್ಯೆಯೂ ವಿದ್ಯಾರ್ಥಿಗಳು ಸಮರ್ಥವಾಗಿ ಪರೀಕ್ಷೆ ಎದುರಿಸಿದ್ದು, ಆದರೆ ವಿದ್ಯಾರ್ಥಿಗಳ ಅನುತ್ತೀರ್ಣ ಪ್ರಮಾಣ ನೋಡುವಾಗ ಮೌಲ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಇದಕ್ಕೆ ನಿದರ್ಶನವೆಂಬಂತೆ ದ.ಕ., ಉಡುಪಿ ಜಿಲ್ಲೆಯಲ್ಲಿ ಸುಮಾರು 748 ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿರುವುದು ಮೌಲ್ಯಮಾಪಕರ ಬೇಜವಾಬ್ದಾರಿ ತೋರಿಸುತ್ತದೆ.
ಹೀಗಾಗಿ ಮೌಲ್ಯಮಾಪಕರ ಎಡವಟ್ಟಿನಿಂದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಸರಕಾರದ ಬೇಜವಾಬ್ದಾರಿಯೂ ಕಾರಣವಾಗಿದ್ದು, ಹೀಗಾಗಿ ಮೌಲ್ಯಮಾಪಕರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ನಮ್ಮ ಮನವಿಗೆ ಸರಕಾರ ಸ್ಪಂದಿಸದಿದ್ದರೆ, ಕಾನೂನು ಹೋರಾಟದ ಜತೆಗೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಪ್ರತಿಭಟನೆ ಬಳಿಕ ಮೌಲ್ಯಮಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್.ಅವರ ಮೂಲಕ ರಾಜ್ಯ ಶಿಕ್ಷಣ ಸಚಿವರಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಪ್ರಮುಖರಾದ ಹಾರೂನ್ ರಶೀದ್, ಪ್ರೇಮನಾಥ ಕೆ., ಶ್ರೀನಿವಾಸ ಭಂಡಾರಿ, ಪ್ರಕಾಶ್ ಬಿ.ಶೆಟ್ಟಿ ತುಂಬೆ, ಸುರೇಶ್, ಇಸ್ಮಾಯಿಲ್ ಅರಬಿ ಕೆಳಗಿನಪೇಟೆ, ಶಾಫಿ ಕೆಳಗಿನಪೇಟೆ ಮತ್ತಿತರರು ಭಾಗವಹಿಸಿದ್ದರು.
Kshetra Samachara
4 years ago
Login with Mobile