ಹಾನಗಲ್ಲ: ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯುತ್ತಿವೆ. ಹೇರಳವಾಗಿರುವ ಜಲಮೂಲ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಲು ಕಾಳಜಿ ವಹಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಇಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಾಲೂಕಿನಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಿಂದ ತುಂಬಿಸಲಾಗುತ್ತಿರುವ ಕೆರೆಗಳ ಮಾಹಿತಿ ಪಡೆದು ಅವರು ಮಾತನಾಡಿದರು. ಕಳೆದ ವರ್ಷ ಧರ್ಮಾ ಜಲಾಶಯದಿಂದ ನೀರು ಹರಿಯದೇ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹವಿಲ್ಲ. ಈ ಬಾರಿ ವರುಣ ಕೃಪೆ ತೋರಿದ್ದಾನೆ. ಉತ್ತಮ ಮಳೆ ಬೀಳುತ್ತಿದೆ. ಧರ್ಮಾ ಜಲಾಶಯವೂ ಭರ್ತಿಯಾಗಿದೆ. ತಾಂತ್ರಿಕ ಅಡಚಣೆಗಳನ್ನೆಲ್ಲ ಸರಿಪಡಿಸಿಕೊಂಡು ಕೆರೆ-ಕಟ್ಟೆಗಳಿಗೆ ನೀರು ಹಾಯಿಸುವಂತೆ ಸೂಚಿಸಿದರು.
ಬಾಳಂಬೀಡ ಮತ್ತು ತಿಳವಳ್ಳಿ ಏತ ನೀರಾವರಿ ಯೋಜನೆಯ ಎಇಇ ರುದ್ರಪ್ಪ, ಬಸಾಪುರ ಏತ ನೀರಾವರಿ ಯೋಜನೆಯ ಎಇಇ ದೇವರಾಜ, ಹಿರೇಕಾಂಶಿ ಏತ ನೀರಾವರಿ ಯೋಜನೆಯ ಎಇಇ ಪ್ರಹ್ಲಾದ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಾನೆ, ಹಿರೇಕಾಂಶಿ ಏತ ನೀರಾವರಿ ಯೋಜನೆಯಡಿ ಒಟ್ಟು 78 ಕೆರೆಗಳಿದ್ದು, ಈಗಾಗಲೇ ಎಲ್ಲ ಕೆರೆಗಳಿಗೂ ನೀರು ಹರಿಸಲಾಗಿದೆ. ಈ ಪೈಕಿ 8 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಉಳಿದ 70 ಕೆರೆಗಳಿಗೆ ಶೇ. 70 ರಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಮೂಡಿ ಏತ ನೀರಾವರಿ ಯೋಜನೆಯಡಿ 6 ಕೆರೆಗಳಿದ್ದು, ಒಂದು ಕೆರೆ ಭರ್ತಿಯಾಗಿ ಉಳಿದ 5 ಕೆರೆಗಳಿಗೆ ಶೇ. 50 ರಷ್ಟು ನೀರು ಹರಿದು ಬಂದಿದೆ.
ಮಹತ್ವಾಕಾಂಕ್ಷೆಯ ಬಾಳಂಬೀಡ ಏತ ನೀರಾವರಿ ಯೋಜನೆಯಡಿ ಒಟ್ಟು 182 ಕೆರೆಗಳಿದ್ದು, ಈಗಾಗಲೇ 60 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. 70 ಕೆರೆಗಳಿಗೆ ಶೇ. 40 ರಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಇನ್ನುಳಿದ 52 ಕೆರೆಗಳಿಗೆ ನೀರು ಹರಿಸಲು ಎದುರಾಗಿರುವ ತಾಂತ್ರಿಕ ಅಡೆಚಣೆಗಳನ್ನು ಸರಿಪಡಿಸಿ ನೀರು ಹರಿಸಲು ಗಮನ ನೀಡಲಾಗಿದೆ. ಬಸಾಪುರ ಏತ ನೀರಾವರಿ ಯೋಜನೆಯಡಿ 9 ಕೆರೆಗಳು ಬರಲಿದ್ದು, ಈಗಾಗಲೇ 4 ಕೆರೆಗಳಿಗೆ ನೀರು ಹರಿಸಲಾಗಿದೆ. ಉಳಿದ 5 ಕೆರೆಗಳಿಗೆ ಶೀಘ್ರ ನೀರು ಹರಿಯಲಿದೆ. ತಿಳವಳ್ಳಿ ಏತ ನೀರಾವರಿ ವ್ಯಾಪ್ತಿಯಗೆ ಒಳಪಡುವ ತಿಳವಳ್ಳಿಯ ದೊಡ್ಡ ಕೆರೆಗೂ ನೀರು ಹರಿಯುತ್ತಿದೆ ಎಂದು ತಿಳಿಸಿದರು.
ಇನ್ನು ಹಾನಗಲ್ಲ ತಾಲೂಕಿನ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ 98 ಕೆರೆಗಳಿಗೂ ನೀರು ಹರಿದು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಕೆರೆಗಳು ಭರ್ತಿಯಾಗುವ ಆಶಾಭಾವನೆ ಇದೆ ಎಂದು ವಿವರಿಸಿದ ಅವರು, ಕಳೆದ ವರ್ಷ ಅನಾವೃಷ್ಟಿಯಿಂದ ಜಲಸಂಪನ್ಮೂಲ ಇಲ್ಲದೇ ಅಂತರ್ಜಲ ಮರುಪೂರಣವೂ ಸಾಧ್ಯವಾಗಿರಲಿಲ್ಲ. ಹಾಗಾಗಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆ ಸವಾಲಿನಿಂದ ಕೂಡಿತ್ತು. ಆದರೆ ಈ ಬಾರಿ ಪರಿಸ್ಥಿತಿ ಉತ್ತಮವಾಗಿದೆ ಎಂದರು.
Kshetra Samachara
24/07/2024 08:31 pm