ಹಾವೇರಿ: ಸರ್ಕಾರಿ ಉದ್ಯೋಗದ ಆಸೆಗೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಸುತ್ತಮುತ್ತಲಿನ 18 ಜನ ನಿರುದ್ಯೋಗಿಗಳು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.
2021-22 ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಕರೆಯಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಿದ್ದರು. ಅರ್ಜಿ ಹಾಕಿದವರನ್ನು ಟಾರ್ಗೆಟ್ ಮಾಡಿದ ರಾಣೆಬೆನ್ನೂರಿನ ನಿವಾಸಿ ರೋಹಿತ್ ಗುತ್ತಲ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾನೆ.
ರೋಹಿತ್ 18 ಜನರಿಂದ 68 ಲಕ್ಷಕ್ಕೂ ಅಧಿಕ ರೂಪಾಯಿ ವಂಚಿಸಿದ್ದಾನೆ. ನನಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೊತ್ತು, ಅವರು ಗೊತ್ತು ಇವರು ಗೊತ್ತು ಎಂದು ಹೇಳಿ ಉದ್ಯೋಗಾಂಕ್ಷಿಗಳಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷ ಒಡ್ಡಿದ್ದಾನೆ. ಸೆಕ್ರೆಟರಿಗಳ ಸಹಿ ಸೀಲ್ ತೋರಿಸಿ ಹಣವನ್ನು ಹಂತ ಹಂತವಾಗಿ ಖಾತೆಗೆ ಹಾಕಿಸಿಕೊಂಡಿದ್ದಾನೆ. ಕೊನೆಗೆ 18 ಜನರಿಗೂ ವರ್ಕ್ ಆರ್ಡರ್ ನೀಡಿದ್ದಾನೆ.
ರೋಹಿತ್ ವರ್ಕ್ ಆರ್ಡರ್ ನೀಡುತ್ತಿದ್ದಂತೆ ಉದ್ಯೋಗಾಂಕ್ಷಿಗಳು ಕರ್ತವ್ಯಕ್ಕೆ ಹಾಜರಾಗಲು ಹೋಗಿದ್ದಾರೆ. ಅಲ್ಲಿಯ ಅಧಿಕಾರಿಗಳು ಅಭ್ಯರ್ಥಿಗಳು ತಂದಿರುವ ವರ್ಕ್ ಆರ್ಡರ್ ನಕಲಿ ಎಂದು ತಿಳಿಸಿದ್ದಾರೆ. ಆಗ ನಿರುದ್ಯೋಗಿಗಳಿಗೆ ತಾವು ಮೋಸಕ್ಕೆ ಒಳಗಾಗಿರುವ ವಿಚಾರ ಗೊತ್ತಾಗಿದೆ. ಈ ಅಮಾಯಕರು ಇದೀಗ ವಿವಿಧ ಸಂಘಟನೆಗಳ ಸಹಾಯದಿಂದ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ರಾಣೆಬೆನ್ನೂರು ಶಹರ ಠಾಣೆಯಲ್ಲಿ ಆರೋಪಿ ರೋಹಿತ್ ವಿರುದ್ದ ದೂರು ದಾಖಲಿಸಿದ್ದಾರೆ.
PublicNext
25/07/2024 08:02 am