ಚಾಮರಾಜನಗರ : ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗಿಗಳ ಸಂಘ ವತಿಯಿಂದ ಮಾ.1 ಮತ್ತು 2 ರಂದು ಯಳಂದೂರಿನಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ತಿಳಿಸಿದರು.
ಯಳಂದೂರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವ ತಂಡಗಳಿಗೆ ಟ್ರೋಫಿಯೊಂದಿಗೆ ನಗದು ಬಹುಮಾನ ವಿತರಣೆ ಮಾಡಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 40 ಸಾವಿರ, ತೃತೀಯ ಬಹುಮಾನ 30 ಸಾವಿರ, ನಾಲ್ಕನೇ ಬಹುಮಾನ 20 ಸಾವಿರ ನಿಗದಿಪಡಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಫೆ.20ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಬರುವ ತಂಡಗಳಿಗೆ ಅವಕಾಶವಿರುವುದಿಲ್ಲ ಎಂದರು.
ರಾಜ್ಯಮಟ್ಟದ ಪಂದ್ಯಾವಳಿಯಾಗಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ತಂಡಗಳಿಗೆ ಯಳಂದೂರಿನಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ನೋಂದಣಿಯಾಗುವ ತಂಡಗಳಿಗೆ 800 ರೂ. ನಿಗದಿಪಡಿಸಲಾಗಿದೆ. ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ ಯಳಂದೂರಿನ ವಿಜಯ ಮೆಡಿಕಲ್ಸ್ ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಚಿನ್ನಸ್ವಾಮಿ, ಶ್ರೀನಿವಾಸ್, ಪಿ.ಚಂದ್ರಶೇಖರ್, ಶ್ರೀನಾಥ್ ಇದ್ದರು.
Kshetra Samachara
03/02/2025 04:56 pm