ಬಳ್ಳಾರಿ: ಸಿನಿಮೀಯ ರೀತಿಯಲ್ಲಿ ಅಪಹರಣವಾಗಿದ್ದ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಪಿ.ಸುನೀಲ್ ಕುಮಾರ್ ಅವರು, ರಾತ್ರಿ 9ರ ಸುಮಾರಿಗೆ ಕುರುಗೋಡು ತಾಲೂಕು ಸೋಮಸಮುದ್ರ ಬಳಿ ಪತ್ತೆಯಾಗುವ ಮೂಲಕ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.
ತಮ್ಮ ನಿವಾಸವಿರುವ ಮುಖ್ಯರಸ್ತೆ ಬಳಿ ವಾಕಿಂಗ್ ಮಾಡುತ್ತಿದ್ದಾಗ ಕಾರಿನಲ್ಲಿ ಬಂದ ಅರಿಚಿತರಿಬ್ಬರು, ಡಾ.ಸುನೀಲ್ ಅವರನ್ನು ಬಲವಂತವಾಗಿ ಕಾರಿನಲ್ಲಿ ದೂಡಿಕೊಂಡು ಅಪಹರಿಸಿ ಪರಾರಿಯಾಗಿದ್ದರು. ಈ ದೃಶ್ಯಾವಳಿ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬೆಳಗ್ಗೆ 7ರ ಸುಮಾರಿಗೆ ಡಾ.ಸುನೀಲ್ ಅವರ ಮೊಬೈಲ್ ಮೂಲಕ ಅವರ ಸಹೋದರ, ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಗುಪ್ತಾ ಅವರಿಗೆ ಅಪಹರಣಕಾರರು ವಾಟ್ಸ್ ಆ್ಯಪ್ ಕರೆ ಮಾಡಿದ್ದರು. ವೈದ್ಯ ಸುನೀಲ್ ಅವರನ್ನು ಅಪಹರಿಸಿದ್ದು, ಬಿಡುಗಡೆಗೆ 5 ಕೋಟಿ ರೂ. ನಗದು ಹಾಗೂ ಚಿನ್ನ ಕೊಡುವಂತೆ ಬೇಡಿಕೆ ಇರಿಸಿದ್ದರು. ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರತ್ಯೇಕ ತಂಡಗಳೊಂದಿಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
PublicNext
26/01/2025 06:23 pm